ಈ ಬ್ಲಾಗ್ ಅನ್ನು ಹುಡುಕಿ

ಚಮತ್ಕಾರ ಉಕ್ತಿಗಳು

 
ಆಂಗ್ಲ ಸಾಹಿತ್ಯವನ್ನು ಅಭ್ಯಾಸಿಸಿ, ಆಳವಾಗಿ ಅರಿತು, ಅದನ್ನು ಪಾಠಮಾಡುತ್ತಾ, ಅಷ್ಟೇ ಆಳವಾಗಿ, ಅಧಿಕೃತವಾಗಿ ಕನ್ನಡ ಸಾಹಿತ್ಯವನ್ನ ಕುರಿತು ಮಾತುನಾಡುವವರು ವಿರಳ.
ಅಂಥವರು - ಶ್ರೀ ಎಸ್. ವಿ. ರಂಗಣ್ಣನವರು.
ಅವರ ಕೆಲುವು ಮಾತುಗಳು.
-------
'ಶಾರದೆಯ ತನುಜಾತೆ ಕನ್ನಡಕ್ಕೆ ರಗಳೆ ತಲೆಯ ರಾಗಟ, ತ್ರಿಪದಿ ಹಣೆಯ ತಿಲಕ, ಚೌಪದಿ ಮೂಗಿನ ನತ್ತು, ಕಂದ ಕೆನ್ನೆ ಸರ, ಷಟ್ಪದಿಗಳವು ಕೊರಳ ಅಡ್ಡಿಕೆ ತಾಳಿ, ವೃತ್ತಗಳು ವಂಕೆ ನಾಗಮುರಿ, ಸಾಂಗತ್ಯ ಕೈ ಕಡಗ, ಗದ್ಯ ಸೊಂಟೆದೊಡ್ಯಾಣ, ವಚನವೇ! ಕಾಲಿನುಂಗುರ ನೀನು; ನಿನ್ನುಲಿಯ ಲಾಲಿಸಿ ಸೈವೆರಗನೈದದ ಕನ್ನಡಿಗನ ಕಿವಿ ದಂತ'
----------
'ಹೊಸ ಅಕ್ಕಿ ಹೊಟ್ಟಿನೋವು; ಹೊಸ ಕವನ ತಲೆಯ ನೋವು; ಬಾಧೆ ತಾಳೆವು ನಾವು.'
-------------
'ನಿನ್ನೆ ನಾಳೆಗಳು ವೇಶ್ಯೆಯರು. ನಿರ್ಬಲದ ನರನ ಇಕ್ಕೆಲದಿ ಪಿಡಿದು ತಮ್ಮಥಳುಕಿನ ಬೆಡಗಿನಲಿ ಕರಗಿಸುವರು. ಕಣ್ಣಮಿಟುಕಿಸುವಷ್ಟರಲ್ಲಿ ಕೈ ಬಿಟ್ಟು ಪೋಪಳು ನಿನ್ನೆ; ಮತ್ತೆ ಕಾಣಿಸಳು. ಇತ್ತ ಓಡುವನು, ಅತ್ತ ಹುಡುಕುವನು, ಹಾ, ಎತ್ತ ಪೋದೆ ಎಂದಳಲುವನು. ಅವಳಿಂದ ಅವನ ಮನವೆಲ್ಲ ವ್ಯಥೆಯ ಕಥೆ.
'ಹಠಾತ್ತು ಬಹುದೂರದಿಂ ಕೇಳುವುದು ನಗೆಯ ಕಿಲಕಿಲ ಧ್ವಾನ. ಕತ್ತೆತ್ತಿ ನೋಡುವನು. ಆಗೋ, ಬೆರಳ ಕೊಂಕಿಸಿ ಸ್ಪಷ್ಟ ಸಂಜ್ಞೆಯ ಮಾಡುತಿರುವಳು ಹಸನ್ಮುಖದ ನಾಳೆ! ಮುಂದೆ ನೀಡಿದೆ ಕೈಯ ತೆರೆದ ಬಾಯಿಯ ತವಕದಲಿ ಸರಿಯುವನು ಸಡಗರದಿ ಆ ಕಡೆಗೆ. ದಕ್ಕುವಳೆ ಆ ಬಿಂಕದ ಸೊಗಸುಗಾರ್ತಿ! ಒಲೆಯುತ್ತ ಅಲೆಯುತ್ತ ನಿಲ್ಲುತ್ತ ನಾಚುತ್ತ ಜಾರುತ್ತ ಹಾರುತ್ತ ಗಿರಗಿರನೆ ಸುತ್ತಿಪಳು ಬಳಲಿಪಳು. ಪವನನಾಹುತಿಗೆ ಸಿಕ್ಕಿದ ಪರ್ಣ ಅವನಿಂದ ಲೇಸು!
'ಪಾಪ ಈ ಮಧ್ಯೆ ಮನೆಯ ಹೆಂಡತಿ ಸೌಮ್ಯಮುಖಿ ಶಕ್ತಿಯುತ ಪ್ರೌಢಿ ಇವೊತ್ತು ಒಲೆಮುಂದೆ  ಕುಳಿತು, ವಲ್ಲಭಗೆ ಕಾದು, ಕಾದು, ತೂಕಡಿಸಿ, ತೋಳ ತಲೆದಿಂಬಿನಲಿ ಒರಗಿ, ಕ್ಷೀಣಿಸುತಿಹಳು. ದುಷ್ಟನಾಥನ ನಿರ್ಲಕ್ಷ್ಯ ದಿಂದ ಅವಳಾಸೆ, ನಿರಾಶೆ, ಅವಳ ಸ್ತ್ರೀಜನ್ಮ ವ್ಯರ್ಥ. ಎಲ್ಲರನು ಎಚ್ಚರಿಸಯ್ಯ, ಅನಿಮಿಷ ಮುಖ್ಯ! ದೇವರ ದೇವ ಮಾವಿನಕೆರೆಯ ರಂಗಯ್ಯ.'
 
-----1954 - ಎಸ್ ವಿ ರಂಗಣ್ಣನವರಿಗೆ ಅವರ ಶಿಷ್ಯಸಮೂಹ  ಸಮರ್ಪಿಸಿದ 'ಬಾಗಿನ' ಎನ್ನುವ ಪುಸ್ತಕದ ನಿಂದ ಕೆಲುವು ಅಂಶಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಏನಾದರೂ ಭಾಷಾದೋಷಗಳು,ವ್ಯಾಕರಣದೋಷಗಳು ಇದ್ದಲ್ಲಿ ದಯವಿಟ್ಟು ತೆಳಿಸಿ.